ಮೂಡುಬಿದಿರೆ: ಅಪಘಾತದಲ್ಲಿ ಮೃತಪಟ್ಟ ಆಳ್ವಾಸ್ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿ ಕಾರ್ತಿಕ್ ಕುಟುಂಬಕ್ಕೆ ನ್ಯಾಯ ಕೊಡುವಂತೆ ಒತ್ತಾಯಿಸಿ ಮೂಡುಬಿದಿರೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಭರವಸೆಯಿತ್ತರು. ಸೋಮವಾರ ಪೋಲೀಸ್, ಆರ್ಟಿಒ, ಬಸ್ಸು ಮಾಲಕರ, ಶಿಕ್ಷಣ ಸಂಸ್ಥೆ ಪ್ರತಿನಿಧಿ, ವಿದ್ಯಾರ್ಥಿ ಪ್ರತಿನಿಧಿಗಳ ಸಭೆ ನಡೆಸುವುದಾಗಿ ತಿಳಿಸಿದರು. ಅಫಘಾತಕ್ಕೆ ಕಾರಣವಾದ ಬಸ್ ಮಾಲಕರು, ಬಸ್ ಮಾಲಕರ ಸಂಘದ ಮುಖಂಡರು ಸ್ಥಳಕ್ಕೆ ಆಗಮಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಸ್ಥಳಕ್ಕಾಗಮಿಸಿದ ಬಸ್ಸು ಮಾಲಕರ ಪ್ರತಿನಿಧಿಗೆ ವಿದ್ಯಾರ್ಥಿಗಳು ನ್ಯಾಯ ಕೋರಿ ಮನವಿಯಿತ್ತರು.
ವಿದ್ಯಾರ್ಥಿ ಪ್ರಮುಖರಾದ ನಿಶಾನ್ ಆಳ್ವ, ರಿತಿನ್ ಶೆಟ್ಟಿ, ರಫೀಝ್ ಮಾತನಾಡಿ ಬಸ್ ಅವಸರದ ಚಾಲನೆಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿದರು. ದುರ್ಘಟನೆ ನಂತರ ವಿದ್ಯಾರ್ಥಿಗಳಿಗೆ ಬಸ್ಸು ನಿಲ್ಲಿಸದಿರುವುದು, ಶುಲ್ಕ ರಿಯಾಯಿತಿ ತೋರದೆ ತೊಂದರೆ ನೀಡುತ್ತಿರುವುದಾಗಿ ಶಾಸಕರಲ್ಲಿ ತಿಳಿಸಿದರು.
ಮೃತ ಬಾಲಕನ ತಂದೆ ಚಂದ್ರಹಾಸ ಆಚಾರ್ಯ ಹಾಗೂ ಮನೆಯವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.