ಮೂಡುಬಿದಿರೆ: ಪ್ರಧಾನಿ ನರೇಂದ್ರ ಮೋದಿಯವರ ಸರ್ವ ವ್ಯಾಪಿ, ಸರ್ವ ಸ್ಪರ್ಶೀ ಚಿಂತನೆಯಂತೆ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯನಿರ್ವಹಿಸಿದ್ದಾರೆ. ಅಧಿಕಾರಾವಧಿಯಲ್ಲಿ ಎಲ್ಲರೂ ಹುಬ್ಬೇರಿಸುವ ರೀತಿಯ ಅಭಿವೃದ್ಧಿಯನ್ನು ಮಾಡುವ ಮೂಲಕ ಕಳೆದ ೩೦ವರುಷಗಳಲ್ಲಿ ಸಾಧ್ಯವಾಗದ್ದನ್ನು ಕೇವಲ ೫ವರುಷಗಳಲ್ಲಿ ಮಾಡಿ ತೋರಿಸಿದ್ದಾರೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಆಳ್ವ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹತ್ತು ಸಾವಿರ ಕಾರ್ಯಕರ್ತರು ನಿಷ್ಟೆಯಿಂದ ಕ್ಷೇತ್ರದಾದ್ಯಂತ ಉಮಾನಾಥ ಕೋಟ್ಯಾನ್ ಪರ ಮತಯಾಚನೆ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ಎಲ್ಲರೂ ಏಕ ಮನಸ್ಸಿನಿಂದ ಬಿಜೆಪಿಯ ಗೆಲುವಿಗೆ ಕಟಿಬದ್ಧರಾಗಿದ್ದಾರೆ ಎಂದರು.
ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ೨೨೧ಬೂತ್ಗಳಲ್ಲಿ ಮೂರು ಸುತ್ತಿನ ಮತಯಾಚನೆ ಕಾರ್ಯ ಪೂರ್ಣಗೊಂಡಿದ್ದು ಜನತೆಯಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಅಭಿವೃದ್ದಿ ಕಾರ್ಯಗಳ ಬಗ್ಗೆ ಜನತೆ ಮಾತನಾಡುತ್ತಿದ್ದಾರೆ. ಮತ್ತೊಮ್ಮೆ ಸೇವಕನ ಸೇವೆ ಬೇಕೆಂಬ ನಿಟ್ಟಿನಲ್ಲಿ ಮತದಾರರು ನಿರ್ಧರಿಸಿದ್ದಾರೆ ಎಂದರು.
೨೦೧೮ರಲ್ಲಿ ಹಿಂದುತ್ವ, ರಾಷ್ಟ್ರೀಯತೆಯ ಆಧಾರದಲ್ಲಿ ಮತಯಾಚಿಸಿದ್ದೆವು. ಈ ಬಾರಿ ಅದರೊಂದಿಗೆ ಅಭಿವೃದ್ಧಿಯೂ ಸೇರಿದ್ದು ನಮಗೆ ಆನೆ ಬಲ ಬಂದಂತಾಗಿದೆ. ಗೆಲುವು ನಮ್ಮದೇ ಎಂಬ ವಿಶ್ವಾಸ ವಿದೆ. ಎಷ್ಟು ಹೆಚ್ಚಿನ ಮತಗಳು ಎಂಬುದು ನಮಗಿರುವ ನಿರೀಕ್ಷೆಯಾಗಿದೆ ಎಂದರು.

ಪ್ರತೀ ಚುನಾವಣೆಯನ್ನು ಭಾರತೀಯ ಜನತಾ ಪಕ್ಷ ಗಂಭೀರವಾಗಿಯೇ ಪರಿಗಣಿಸುತ್ತಿದೆ. ಈ ಬಾರಿಯ ಚುನಾವಣೆಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ದಿನದ ೧೮ತಾಸುಗಳ ಕಾಲ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಳ್ಳುತ್ತಾ ಜನತೆಯ ಮನೆ ಮನಕ್ಕೆ ತಲುಪಿದ್ದಾರೆ. ಮತದಾರರಿಂದ ಪೂರಕ ವಾತಾವರಣ ಮೂಡಿಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೋಪಾಲ್ ಶೆಟ್ಟಿಗಾರ್, ಈಶ್ವರ್ ಕಟೀಲು, ಕೇಶವ ಕರ್ಕೇರ ಉಪಸ್ಥಿತರಿದ್ದರು.