ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಮೂಡುಬಿದಿರೆಯ ಸಾವಿರ ಕಂಬದ ಬಸದಿ (ತ್ರಿಭುವನ ತಿಲಕ ಚೂಡಾಮಣಿ ಬಸದಿ)ಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.15ರಂದು ವಿಶೇಷ ವಿದ್ಯುತ್ ದೀಪಾಲಂಕಾರ ಹಾಗೂ ಮಂಗಳವಾದ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.

ಆ.15ರಂದು ಶನಿವಾರ ಸಂಜೆ 7ರಿಂದ 8.30ರವರೆಗೆ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಬಸದಿ ವಿದ್ಯುತ್ ದೀಪಗಳಿಂದ ಕಂಗೊಳಿಸಲಿದೆ. ಮಂಗಳವಾದ್ಯದೊಂದಿಗೆ ನಡೆಯಲಿರುವ ಈ ವಿಶೇಷ ಅಲಂಕಾರವನ್ನು ಸಾರ್ವಜನಿಕರು ವೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕದ ಜೈನ ಪರಂಪರೆಯ ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಕೇಂದ್ರವಾಗಿರುವ ಸಾವಿರ ಕಂಬದ ಬಸದಿ ತನ್ನ ವಿಶಿಷ್ಟ ವಾಸ್ತುಶಿಲ್ಪ, ಸೂಕ್ಷ್ಮ ಕೆತ್ತನೆಗಳು ಹಾಗೂ ನೂರಾರು ಕಂಬಗಳ ವಿನ್ಯಾಸದಿಂದ ಪ್ರಸಿದ್ಧವಾಗಿದೆ. ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ಈ ಬಸದಿ ಮೂಡುಬಿದಿರೆಯ ಜೈನ ಪರಂಪರೆಯ ಪ್ರಮುಖ ಸ್ಮಾರಕಗಳಲ್ಲಿ ಒಂದಾಗಿದೆ.

ಸಾರ್ವಜನಿಕರು ತಮ್ಮ ಬಂಧು-ಮಿತ್ರರೊಂದಿಗೆ ಆಗಮಿಸಿ ವಿಶೇಷ ದೀಪಾಲಂಕಾರದ ಸೊಬಗನ್ನು ವೀಕ್ಷಿಸಿ ದರ್ಶನದ ಲಾಭ ಪಡೆಯುವಂತೆ ಜೈನ ಕಾಶಿ ಟ್ರಸ್ಟ್ (ರಿ.), ಜೈನ ಕಾಶಿ, ಮೂಡುಬಿದಿರೆ ವಿನಂತಿಸಿದೆ. ಜಿನಮಂದಿರದ ಪಾವಿತ್ರ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.