ಯುಕೆಟಿಎಲ್ : ಮುಗಿಯದ ಗೋಳು…ಕೃಷಿಕರ ಪರದಾಟ
ಮೂಡುಬಿದಿರೆ: ಯುಕೆಟಿಎಲ್ ಕಾಮಗಾರಿ ಎಗ್ಗಿಲ್ಲದೆ ಸಾಗುತ್ತಿದೆ. ನಿಡ್ಡೋಡಿ ಸಮೀಪದ ಮಿತ್ತ ಮಾಣಿಲದಲ್ಲಿ ಬೆಳೆದು ನಿಂತ ಭತ್ತದ ಗದ್ದೆಯ ಹುಣಿಯಲ್ಲಿ ಬೃಹತ್ ವೈರ್ಗಳು ಕೃಷಿ ನಾಶಕ್ಕೆ ಮುಂದಾಗಿದೆ.
ಬಾಲಕೃಷ್ಣ ಅಂಚನ್ ಎಂಬವರಿಗೆ ಸೇರಿದ ಕೃಷಿ ಭೂಮಿಯಲ್ಲಿ ಟವರ್ ನಿರ್ಮಾಣವಾಗಿದ್ದು ಪಕ್ಕದ ಕೃಷಿ ಭೂಮಿಯಲ್ಲಿ ಲೈನ್ ಕಾಮಗಾರಿ ನಡೆದಿದೆ. ಅಂಚನ್ ಅವರ ಗದ್ದೆಯಲ್ಲಿ ಬೃಹತ್ ವಯರ್ಗಳನ್ನು ತಂದು ಹಾಕಲಾಗಿದೆ. ಈವರೆಗೂ ಪರಿಹಾರದ ಚೆಕ್ ವಿತರಣೆಯಾಗಿಲ್ಲ. ಇದು ಕೇವಲ ಒಂದು ಉದಾಹರಣೆಯಲ್ಲ. ಕಲ್ಲಮುಂಡ್ಕೂರು, ತೆಂಕ ಎಡಪದವು, ನಿಡ್ಡೋಡಿ, ಕಲ್ಲಮುಂಡ್ಕೂರು, ಮಂಜನಬೈಲು, ಹೀಗೆ ಹಲವು ಕಡೆಗಳಲ್ಲಿ ಕೃಷಿಕರ ಪಾಡು ಹೇಳತೀರದು ಎಂಬ0ತಾಗಿದೆ.

ಬೃಹತ್ ಯಂತ್ರಗಳು…ಜೆಸಿಬಿ ಹಿಟಾಚಿಗಳು: ವಿದ್ಯುತ್ ಲೈನ್ ಕಾಮಗಾರಿಗಾಗಿ ದೊಡ್ಡ ದೊಡ್ಡ ಜೆಸಿಬಿ ಯಂತ್ರಗಳು, ಹಿಟಾಚಿಗಳು, ಇತರೆ ಯಂತ್ರ ಪರಿಕರಗಳು ವೈರುಗಳೊಂದಿಗೆ ಕಂಪೆನಿಯ ಕಾರ್ಮಿಕರು ಆಗಮಿಸುತ್ತಿದ್ದು, ಅಪಾರ ಕೃಷಿ ನಾಶವಾಗುತ್ತಿದೆ. ದೊಡ್ಡ ಪ್ರದೇಶಗದಲ್ಲಿ ಈ ಪರಿಕರಗಳನ್ನು ಸಂಗ್ರಹಿಸುವಾಗ ಅಪಾರ ಪ್ರಮಾಣದಲ್ಲಿ ಹಸಿರು ನಾಶವಾಗುತ್ತಿದೆ, ಪರಿಸರದಲ್ಲಿ ತೀವ್ರ ಸಮಸ್ಯೆ ಎದುರಾಗುತ್ತಿದೆ. ಇದರಿಂದಾಗಿ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಗದ್ದೆಯಲ್ಲಿ ರಾಶಿಬಿದ್ದ ವೈರ್ಗಳು
“ನಂಬಿಕೆ ಇಲ್ಲವೇ? ಒಂದು ವಾರದೊಳಗೆ ಕೊಡುತ್ತೇವೆ” ಎಂಬ ಉದ್ಧಟತನದ ಮಾತುಗಳನ್ನು ಕೆಂಪೆನಿಯ ವ್ಯಕ್ತಿಗಳು ಆಡುತ್ತಿದ್ದಾರೆ. ಅಂಚನ್ ಅವರು ಹಣ ನೀಡುವಂತೆ ಕೇಳಿಕೊಂಡರೂ ಪ್ರಯೋಜನವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಗದ್ದೆ ಹಾಗೂ ತೋಟದಲ್ಲಿ ಲೈನ್ ಹಾದುಹೋಗಲಿದ್ದು, ಮರಗಳನ್ನು ಕಡಿಯಲು ಮುಂದಾಗಿದ್ದಾರೆ. ಯೋಜನೆ ಅನುಷ್ಠಾನ ಆದ ಮೇಲೆ ಹಣ ಕೊಡುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ ಇದೆ ಎನ್ನುವ ಪ್ರಶ್ನೆ ಅವರದ್ದು. ಅಗ್ರಿಮೆಂಟ್ ಮಾಡಿಲ್ಲ. ಪ್ಲೇನ್ ಶೀಟ್ಗೆ ಸೈನ್ ಕೇಳುತ್ತಾರೆ. ಇಲ್ಲಿ ಯಾರೂ ನನ್ನ ಬೆಂಬಲಕ್ಕಿಲ್ಲ ಎಂಬ ಅಳಲು ಅವರದ್ದು. ಸ್ಥಳೀಯರ ಕೃಷಿಕರು, ಕೃಷಿ ಸಂಘಟನೆಗಳು ಈ ರೈತರ ಸಹಕಾರಕ್ಕೆ ಮುಂದಾಗಬೇಕಾಗಿದೆ.

ನಮ್ಮನ್ನು ಸಂಪರ್ಕಿಸಲಿ: ಈಗಾಗಲೇ ಮಂಗಳವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಂತ್ರಸ್ಥರ ದೂರು ದಾಖಲಿಸಲಾಗಿದೆ. ಪರಿಹಾರದ ಹಣ ಪಾವತಿಸದೆ ಕಾಮಗಾರಿ ಮಾಡಲು ಬಿಡುವುದಿಲ್ಲವೆಂದು, ರೈತರ ಪರವಾಗಿ ಸ್ಪಷ್ಟವಾಗಿ ತಿಳಿಸಿದ್ದು, ಆಯುಕ್ತರು ಪರಿಹಾರದ ಹಣ ಪಾವತಿಸದೇ ಕಾಮಗಾರಿ ಮಾಡುವಂತಿಲ್ಲವೆAದು ಸ್ಪಷ್ಟವಾಗಿ ಕಂಪೆನಿಯವರಿಗೆ ಆದೇಶಿಸಿದ್ದಾರೆ ಎಂದು ವಕೀಲ ಶಾಂತಿ ಪ್ರಸಾದ್ ಹೆಗ್ಡೆ ಹೇಳಿದ್ದಾರೆ. ರೈತರು ಈ ವಿಚಾರದಲ್ಲಿ ಏನೇ ಸಮಸ್ಯೆಗಳಿದ್ದರೂ ಮೂಡುಬಿದಿರೆಯಲ್ಲಿರುವ ಕಿಸಾನ್ ಕಚೇರಿ ಪ್ರಮುಖರಾದ ಪ್ರವೀಣ್ ಭಂಡಾರಿ ಅಥವಾ ಅಲ್ಫೋನ್ಸ್ ಅವರನ್ನು ಸಂಪರ್ಕಿಸಬಹುದೆAದು ಶಾಂತಿ ಪ್ರಸಾದ್ ಹೆಗಡೆ ಹೇಳಿದ್ದಾರೆ.