ಶ್ರದ್ಧಾ ಭಕ್ತಿಯ ಕ್ಷೇತ್ರಕ್ಕೆ ಭಕ್ತರ ಆಗಮನವಾಗಲಿ: ಪೇಜಾವರ ಶ್ರೀ

ನೆಲ್ಲಿತೀರ್ಥ ಕ್ಷೇತ್ರಕ್ಕೆ ಪೇಜಾವರ ಶ್ರೀ ಭೇಟಿ
ಮೂಡುಬಿದಿರೆ: ಐತಿಹಾಸಿಕ ಪ್ರಸಿದ್ಧಿಯ ನೆಲ್ಲಿತೀರ್ಥ ಗುಹಾ ಕ್ಷೇತ್ರಕ್ಕೆ ಉಡುಪಿ ಪೇಜಾವರ ಮಠಾಧೀಶ ಶ್ರೀಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ಗುರುವಾರ  ಗುಹಾ ಪ್ರವೇಶಗೈದು, ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಹಿಂದೆಯೂ ನೆಲ್ಲಿತೀರ್ಥ ಗುಹಾಕ್ಷೇತ್ರಕ್ಕೆ ಪೇಜಾವರ ಶ್ರೀಗಳು ಆಗಮಿಸಿದ್ದನ್ನು ಸ್ಮರಿಸಿದ ಶ್ರೀಗಳು, ಕಾರಣೀಕ ಕ್ಷೇತ್ರ ಇದಾಗಿದೆ. ಭಕ್ತರು ಶ್ರದ್ಧಾ ಭಕ್ತಿಯಿಂದ ಕ್ಷೇತ್ರ ದರ್ಶನ ಮಾಡಬೇಕು. ಕ್ಷೇತ್ರದ ವಿಚಾರ ಎಲ್ಲೆಡೆ ಪಸರಿಸುವಂತಾಗಲಿ ಎಂದು ಆಶೀರ್ವದಿಸಿದರು.

ಶ್ರೀಗಳ ಭೇಟಿಯ ಸಂದರ್ಭದಲ್ಲಿ ಪ್ರಸನ್ನ ಭಟ್, ನೆಲ್ಲಿತೀರ್ಥ ವಸಂತ ಭಟ್, ಡಾ.ವಾದೀಶ್ ಭಟ್ ಹಾಗೂ ಅರ್ಚಕ ಗಣಪತಿ ಭಟ್ ಸಹಿತ ಶಿಷ್ಯವರ್ಗ, ಅನೇಕ ಗಣ್ಯರು ಇದ್ದರು.
ನೆಲ್ಲಿತೀರ್ಥ ಗುಹಾಲಯ ಐತಿಹಾಸಿಕ ಮಹತ್ವದ ಕ್ಷೇತ್ರ. ಇಲ್ಲಿ ಸೋಮನಾಥೇಶ್ವರನ ದೇಗುಲವಿದೆ. ಸಮೀಪದಲ್ಲಿಯೇ ಪುರಾತನ ಗುಹೆಯೂ ಇದೆ. ಅಪಾರ ಐತಿಹ್ಯವನ್ನು ಹೊಂದಿದ ಕ್ಷೇತ್ರ ಇದಾಗಿದ್ದು, ತನ್ನ ಕಾರಣೀಕ ಶಕ್ತಿಗಳಿಂದಾಗಿ ಭಕ್ತರನ್ನು ಸೂಜಿಗಲ್ಲಿನಂತೆ ತನ್ನತ್ತ ಆಕರ್ಷಿಸುತ್ತಾ ಪ್ರಸಿದ್ಧಿ ಪಡೆದಿದೆ.
ಈ ದೇವಾಲಯವು ಮಂಗಳೂರಿನಿoದ ೧೭ಕಿಲೋ ಮೀಟರ್ ದೂರದಲ್ಲಿ ಇದೆ. ಗುಹೆಯ ಒಳಗೆ ನೀರಿನ ಹನಿಗಳು ನೆಲ್ಲಿಕಾಯಿಯಂತೆ ಕೆರೆಗೆ ಬೀಳುತ್ತಿರುತ್ತದೆ. ಹೀಗಾಗಿ ಅದಕ್ಕೆ ನೆಲ್ಲಿತೀರ್ಥ ಎಂಬ ಹೆಸರು ಬಂತು. ಸೋಮನಾಥೇಶ್ವರ ದೇವಾಲಯದ ಬಲಕ್ಕೆ ನೈಸರ್ಗಿಕ ಗುಹೆ ಇದೆ. ಇದು ಸುಮಾರು೨೦೦ ಮೀಟರ್ ಉದ್ದವಿದೆ. ಒಳಗೆ ಒಂದು ಸರೋವರ ಮತ್ತು ಶಿವಲಿಂಗವಿದೆ. ದೇವಾಲಯದ ಮುಖ್ಯ ದೇವರು ಶ್ರೀ ಸೋಮನಾಥೇಶ್ವರ (ಶಿವ). ಈ ದೇವಸ್ಥಾನದಲ್ಲಿ ಮಹಾಗಣಪತಿ ದೇವರು ಮತ್ತು ಜಾಬಾಲಿ ಮಹರ್ಷಿಯು ಇಲ್ಲಿದ್ದಾರೆ. ವಾಸ್ತವವಾಗಿ,ಜಾಬಾಲಿ ಮಹರ್ಷಿಯ ಬೃಂದಾವನವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ.

Share

Leave a Reply

Your email address will not be published. Required fields are marked *